ಬೆಂಗಳೂರು: ಬೆಂಗಳೂರಿನ ರಸ್ತೆಗಳ ಅವಸ್ಥೆ ಹಳೆ ಮುದುಕಿಗೆ ಶೃಂಗಾರ ಅನ್ನೋ ಸ್ಥಿತಿಗೆ ಬಂದು ತಲುಪಿವೆ. ಎಷ್ಟೇ ಸರೀ ಮಾಡಿದ್ರೂ ಕಳಪೆ ಕಾಮಗಾರಿಗೆ ಮುಕ್ತಿ ಸಿಗುತ್ತಿಲ್ಲ. ಬೆಂಗಳೂರಿನ ಹೃದಯ ಭಾಗದ ಕೆಂಪೇಗೌಡ ಬಸ್ ನಿಲ್ದಾಣವೇ ಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ. ಮಾಧ್ಯಮಗಳ ಬಾಯಿ ಮುಚ್ಚಿಲು ಬಿಬಿಎಂಪಿ ಅಧಿಕಾರಿಗಳು ತೋರಿಕೆಗೆ ಕೆಲಸ ಮಾಡ್ತಾ ಇದ್ದಾರಾ ಅನ್ನೋ ಅನುಮಾನ ಮೂಡಿದೆ. ಇವತ್ತು ಗುಂಡಿ ಮುಚ್ಚುತ್ತೇವೆ, ನಾಳೆ ಮುಚ್ಚುತ್ತೇವೆ ಅಂತಾ ಬಿಬಿಎಂಪಿ ಅಧಿಕಾರಿಗಳು ಕಾಗಕ್ಕ ಗುಬ್ಬಕ್ಕನ ಕಥೆ ಹೇಳ್ತಾ ಇದ್ದಾರೆ. ಆದರೆ ಸಮಸ್ಯೆಗೆ ಇಂದಿಗೂ ಮುಕ್ತಿ ದೊರೆತಿಲ್ಲ.
ಹೀಗಾಗಿ ಇಲ್ಲಿನ ಜನರು ಜೀವ ಕೈಲಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಒಳಗೆ ಕುಳಿತಿದ್ದವರು ಸಹ ಜೀವವನ್ನು ಅಂಗೈನಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ. ಯಾಕಂದ್ರೆ ಬೃಹತ್ ಗುಂಡಿಗಳಿಗೆ ಬಸ್ ಚಕ್ರಗಳು ಇಳಿದು ಹತ್ತುವಾಗ ವಾಹನಗಳು ಡ್ಯಾನ್ಸ್ ಮಾಡುತ್ತವೆ. ಒಂದು ಕಡೆ ನಗರ ವ್ಯಾಪ್ತಿ ಗುಂಡಿ ಸಮಸ್ಯೆಯಿಂದ ಹೈರಾಣಾಗಿರುವ ಜನರು ಇನ್ನೊಂದು ಕಡೆ ಮೆಜೆಸ್ಟಿಕ್ ಭಾಗದಲ್ಲೂ ಗುಂಡಿ ಸಮಸ್ಯೆಯಿಂದ ಸುಸ್ತಾಗಿ ಹೋಗಿದ್ದಾರೆ.