Spread the love

ಸಿಂಗಾಪುರಕ್ಕೆ ತೆರಳುವ ವಿಮಾನವೊಂದು ಪ್ರಯಾಣಿಕರನ್ನು ನಿಲ್ದಾಣದಲ್ಲೇ ಬಿಟ್ಟು 5 ಗಂಟೆ ಮೊದಲೇ ಟೇಕಾಫ್‌ ಆಗಿದೆ. ಅಮೃತಸರ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 30 ಪ್ರಯಾಣಿಕರನ್ನು ಬಿಟ್ಟು ವಿಮಾನ ನಿಗದಿತ ಸಮಯಕ್ಕಿಂತ 5 ಗಂಟೆ ಮುಂಚಿತವಾಗಿ ಹೊರಟುಬಿಟ್ಟಿದೆ.

ಸ್ಕೂಟ್ ಏರ್‌ಲೈನ್ ವಿಮಾನ ರಾತ್ರಿ 7.55 ಕ್ಕೆ ಹೊರಡಬೇಕಿತ್ತು. ಆದರೆ ಮಧ್ಯಾಹ್ನ 3 ಗಂಟೆಗೆ ಟೇಕಾಫ್‌ ಆಗಿದೆ. ವಿಮಾನಯಾನ ಸಂಸ್ಥೆಯ ಪ್ರಕಾರ, ಪ್ರಯಾಣಿಕರಿಗೆ ಇ-ಮೇಲ್ ಮೂಲಕ ವಿಮಾನದ ಸಮಯದ ಬದಲಾವಣೆಯ ಬಗ್ಗೆ ತಿಳಿಸಲಾಗಿದೆಯಂತೆ.

ಇ-ಮೇಲ್ ಪರಿಶೀಲಿಸಿದ ನಂತರ 30 ಪ್ರಯಾಣಿಕರು ನಿಲ್ದಾಣಕ್ಕೆ ದೌಡಾಯಿಸಿದ್ದಾರೆ. ಆದ್ರೆ ಅಷ್ಟರಲ್ಲಾಗ್ಲೇ ವಿಮಾನ ಹೊರಟು ಹೋಗಿತ್ತು. ಅಮೃತಸರ ವಿಮಾನ ನಿಲ್ದಾಣದ ಅಧಿಕಾರಿಯ ಪ್ರಕಾರ, ವಿಮಾನ ಮಿಸ್‌ ಆದ ಗುಂಪಿನಲ್ಲಿರುವ 30 ಜನರಿಗೆ ಟಿಕೆಟ್ ಕಾಯ್ದಿರಿಸಿದ ಟ್ರಾವೆಲ್ ಏಜೆಂಟ್, ಪ್ರಯಾಣಿಕರಿಗೆ ಸಿಂಗಾಪುರಕ್ಕೆ ಹೋಗುವ ವಿಮಾನದ ಸಮಯ ಬದಲಾವಣೆ ಬಗ್ಗೆ ತಿಳಿಸಿರಲಿಲ್ಲ. ಹಾಗಾಗಿ ಕೊನೆಕ್ಷಣದಲ್ಲಿ ವಿಮಾನ ಬೇಗನೆ ಹೊರಡುತ್ತಿರುವ ವಿಚಾರ ಪ್ರಯಾಣಿಕರಿಗೆ ಗೊತ್ತಾಗಿದೆ. ಅವರು ಅಮೃತಸರ ನಿಲ್ದಾಣ ತಲುಪಿ ಚೆಕ್‌ಇನ್‌ ಮುಗಿಸುವಷ್ಟರಲ್ಲಿ ವಿಮಾನ ಸಿಂಗಾಪುರಕ್ಕೆ ಹಾರಿದೆ.

ಈ ಘಟನೆ ಬಗ್ಗೆ ಡಿಜಿಸಿಎ ಕೂಡ ಪರಿಶೀಲಿಸುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ದೇಶೀಯ ವಿಮಾನಯಾನ ಸಂಸ್ಥೆಗಳು ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿವೆ. ತಾಂತ್ರಿಕ ದೋಷ, ಪ್ರಯಾಣಿಕರ ನಿರ್ವಹಣೆಯಲ್ಲಿ ಸಮಸ್ಯೆ, ವಿಮಾನದಲ್ಲಿ ಮದ್ಯಪಾನಿಗಳ ದುರ್ನಡತೆ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಇತ್ತೀಚೆಗಷ್ಟೆ ಕುಡಿದ ಅಮಲಿನಲ್ಲಿ ಪ್ರಯಾಣಿಕನೊಬ್ಬ ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣವೂ ನಡೆದಿತ್ತು.


Spread the love

By admin