Spread the love

ಕೊಟ್ಟೂರು:- ನವಂಬರ್-01ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ಯ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ 11.00 ಗಂಟೆಗೆ ರಾಜ್ಯಾದ್ಯಂತ ಕನ್ನಡ ನಾಡು,ನುಡಿ ಸಾರುವ ಸುಪ್ರಸಿದ್ಧ ಕವಿಗಳ ಕವಿತೆಗಳಿಗೆ ಗಾಯನ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತಾಲೂಕು ಆಡಳಿತವು ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ಹಿಂಭಾಗದ ವೇದಿಕೆಯಲ್ಲಿ ಏರ್ಪಡಿಸಿದ್ದ ಗಾಯನ ಕಾರ್ಯಕ್ರಮದಲ್ಲಿ ಹೊಸಪೇಟೆಯ ಗಾಯಕರಾದ ವಿಜಯಕುಮಾರ್, ಮ.ಬ.ಸೋಮಣ್ಣ,ವಾಣಿಶ್ರೀ ಇವರಿಂದ ಕುವೆಂಪು ರವರ ನಾಡಗೀತೆಯಾದ “ಭಾರತ ಜನನಿಯೆ ತನುಜಾತೆ”,ಕರ್ನಾಟಕ ಏಕೀಕರಣ ಸಮಯದಲ್ಲಿ ಕನ್ನಡ ನಾಡು ಉದಯವಾಗಲಿ ಎನ್ನುವ ಆಶಯದೊಂದಿಗೆ ಹುಯಿಲಗೋಳ ನಾರಾಯಣರಾವ್ ರವರಿಂದ ರಚಿತವಾದ “ಉದಯವಾಗಲಿ ಚೆಲುವ ಕನ್ನಡ ನಾಡು”,ಕುವೆಂಪು ರವರ “ಬಾರಿಸು ಕನ್ನಡ ಡಿಂಡಿಮವಾ” ಡಿ ಎಸ್ ಕರ್ಕಿಯವರ “ಹಚ್ಚೇವು ಕನ್ನಡ ದೀಪ”,ಚನ್ನವೀರ ಕಣವಿಯವರ “ವಿಶ್ವ ವಿನೂತನ ವಿದ್ಯಾ ಚೇತನ” ಹಾಗೂ ಹಂಸಲೇಖ ಇವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎನ್ನುವ ಆರು ಗೀತೆಗಳನ್ನು ಗಾಯಕರು ಹಾಡಿದರು.

ಗಚ್ಚಿನಮಠ,ಕೊಟ್ಟೂರೇಶ್ವರ,ವಿಸ್ಡಂ,ಮಹಾದೇವ,ಗುರುದೇವ, ಕೆಬಿಕೆ,ಗುರುಬಸವೇಶ್ವರ, ಜ್ಞಾನಸುಧಾ,ಆರ್ ಎಂ ಕೆ, ಗಂಗೋತ್ರಿ,ನವಚೇತನ ಶಾಲಾ ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಿದ್ದು,ಗಾಯಕರ ಹಾಡಿಗೆ ಧ್ವನಿಯಾಗಿ ಹಾಡುತ್ತಾ,ಕೇಳುಗರ ಮನಸೂರೆಗೊಂಡರು.ಕೊನೆಯಲ್ಲಿ ಹಾಡಿದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಹಾಡಿಗೆ ತಹಶೀಲ್ದಾರ್ ಕುಮಾರಸ್ವಾಮಿ ಎಂ, ಕಾರ್ಯನಿರ್ವಾಹಕ ಅಧಿಕಾರಿ ಬೆಣ್ಣಿ ವಿಜಯಕುಮಾರ್,ಇಸಿಒ ಅಜ್ಜಪ್ಪ, ಶಿಕ್ಷಕರು ಹಾಗೂ ಮಕ್ಕಳು ಹೆಜ್ಜೆ ಹಾಕಿ ಹರ್ಷ ವ್ಯಕ್ತಪಡಿಸಿದರು.ಅಜ್ಜಯ್ಯ ಸಿ.ಆರ್.ಪಿ ಸ್ವಾಗತಿಸಿದರು.ಶಶಿಧರ ಮೈದೂರು ಪ್ರಾಸ್ತಾವಿಕ ನುಡಿದರೆ ರವಿ ಹೆಚ್ ಹೆಚ್.ಎಂ ಹಾಗೂ ಸಿ.ಮ ಗುರುಬಸವರಾಜ ನಿರ್ವಹಿಸಿದರು. ಮಂಜುನಾಥ ಬಣಕಾರ ಸಿ.ಆರ್.ಪಿ ವಂದಿಸಿದರು.ಶ್ರೀ ಗುರುಕೊಟ್ಟೂರೇಶ್ವರ ದೇವಸ್ಥಾನದ ಧರ್ಮಕರ್ತರು ವೇದಿಕೆ ಒದಗಿಸುವುದರೊಂದಿಗೆ ಹಾಜರಾದ ಶಾಲಾ ಮಕ್ಕಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.

ವರದಿ : ವಿಷ್ಣು .ಎಲ್. ಕೊಟ್ಟೂರು


Spread the love