ಚಾಮರಾಜನಗರ:- ತಾಲೂಕಿನ ಯರಗನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಅಧ್ಯಕ್ಷೆ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಲಾಟರಿ ಮೂಲಕ ಜಯ ಒಲಿದು ಬಂದಿದೆ. ಶನಿವಾರ ಗ್ರಾಮ ಪಂಚಾಯತಿ ಆವರಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಾದಲವಾಡಿಯ ಮಹದೇವಮ್ಮ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮೀನಾಕ್ಷಿ ಸ್ಪರ್ಧಿಸಿದ್ದರು.
೧೫ ಸದಸ್ಯರಲ್ಲಿ, ಒಬ್ಬರು ಗೈರಾಗಿದ್ದರು. ಆದ್ದರಿಂದ ಇಬ್ಬರಿಗೂ ತಲಾ ಎಂಟು ಮತಗಳು ಬಂದವು. ನಂತರ ಲಾಟರಿ ಮೂಲಕ ಆಯ್ಕೆ ಮಾಡಿದಾಗ ಕಿಲಗೆರೆ ಗ್ರಾಮದ ಮೀನಾಕ್ಷಿ ಅವರು ಜಯಭೇರಿ ಬಾರಿಸಿ ೧೮ ತಿಂಗಳ ನಂತರ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಕಾವೇರಿ ನೀರಾವರಿ ನಿಗಮದ ಎಇಇ ಸತ್ಯನಾರಾಯಣ, ಪಿಡಿಒ ಉಮೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಸೋಮಶೇಖರಪ್ಪ, ನಾಗಮಲ್ಲಶೆಟ್ಟಿ, ಪಾರ್ವತಮ್ಮ, ಮಂಗಳಮ್ಮ, ಕುಮಾರಸ್ವಾಮಿ, ನೀಲಮ್ಮ, ಮುಖಂಡರಾದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬೆಳ್ಳಪ್ಪ, ರಾಜಶೇಖರಮೂರ್ತಿ, ಶ್ರೀಕಂಠಪ್ಪ, ವೃಷಬೇಂದ್ರಪ್ಪ, ಶಿವಕುಮಾರ್, ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಂಗಾರನಾಯಕ, ಪ್ರಕಾಶ್, ಗುರುಸ್ವಾಮಿ, ಸ್ವಾಮಿ, ಮನೋಜ್, ಶಿವು ಸೇರಿದಂತೆ ಇತರರಿದ್ದರು.