ಬೆಂಗಳೂರು : ಮಂಗಳವಾರ ನಾಗವಾರದಲ್ಲಿ ನಡೆದ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ ಸೇರಿದಂತೆ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಘಟನೆ ಸಂಬಂಧ ನಿನ್ನೆ ರಾತ್ರಿ ಎಫ್ಐಆರ್ ನಲ್ಲಿ ಯಾರ ಹೆಸರು ಇರಲಿಲ್ಲ. ಯಾರ ಹೆಸರೂ ಅವರಿಗೆ ಗೊತ್ತಿರಲಿಲ್ಲ. ಇದೀಗ ಅವರು ಹೆಸರು ಸೂಚಿಸಿ ಪೊಲೀಸರು ಎಫ್ಐಆರ್ ಮಾಡಿದ್ದಾರೆ ಎಂದು ಹೇಳಿದರು.
ಈಗ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಯ ಪೂಜಾ ಜೆಇ, ಚೈತನ್ಯ, ಮೆಥಾಯಿ ಕಂಪನಿಯ ವಿಕಾಸ್ ಸಿಂಗ್ ಪಿಎಂ, ಸೂಪರ್ ವೈಸರ್ ಲಕ್ಷ್ಮಿ ಪತಿ, ಬಿಎಂಆರ್ಸಿಎಲ್ ಎಂಜಿನಿಯರ್ ವೆಂಕಟೇಶ್ ಶೆಟ್ಟಿ, ಬಿಎಂಆರ್ಸಿಎಲ್ ಎಂಜಿನಿಯರ್ ಮಹೇಶ್ ಬೆಂಡೆಕೇರಿ ಇವರ ಮೇಲೆ ದೂರು ದಾಖಲಾಗಿದ್ದು, ಕ್ರಮ ಆಗಲಿದೆ ಎಂದರು. ಇದೇ ವೇಳೆ ತಾಯಿ ಮಗುವಿನ ಸಾವಿನ ಕುರಿತು ವಿಷಾದಿಸಿದ ಅವರು, ನಿರ್ಲಕ್ಷ್ಯದಿಂದ ಪ್ರಾಣ ಹಾನಿಯಾಗಿದೆ. ಈ ರೀತಿ ಆಗಬಾರದು, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.