Spread the love

ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ಕಳೆದ ಕೆಲವು ದಿನಗಳಿಂದ ಮೌನಕ್ಕೆ ಶರಣಾಗಿದ್ದಾರೆ. 1975 ರಿಂದ 77 ರವರೆಗೆ ಭಾರತದಲ್ಲಿ ಹೇರಲಾಗಿದ್ದ ಎಮರ್ಜೆನ್ಸಿ ಕುರಿತ ಚಿತ್ರವನ್ನು ಕಂಗನಾ ನಿರ್ಮಿಸುತ್ತಿದ್ದು, ಅದರಲ್ಲಿಯೇ ಬ್ಯುಸಿಯಾಗಿದ್ದಾರೆ.

ಎಮರ್ಜೆನ್ಸಿ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಪಾತ್ರವನ್ನು ಕಂಗನಾ ನಿರ್ವಹಿಸುತ್ತಿದ್ದು, ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ.

ಎಮರ್ಜೆನ್ಸಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗಲು ಸಿದ್ಧವಾಗಿದ್ದರ ಮಧ್ಯೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ಎಮರ್ಜೆನ್ಸಿ ಚಿತ್ರ ನಿರ್ಮಾಣಕ್ಕಾಗಿ ನನ್ನ ಎಲ್ಲಾ ಆಸ್ತಿಯನ್ನು ಅಡವಿಟ್ಟಿದ್ದೇನೆ ಎಂದು ಹೇಳಿರುವ ಕಂಗನಾ ರಣಾವತ್, ಚಿತ್ರೀಕರಣದ ಸಂದರ್ಭದಲ್ಲಿ ತಮಗೆ ಡೆಂಗ್ಯೂ ಬಂದ ಕಾರಣ ಅನಾರೋಗ್ಯಕ್ಕೆ ಒಳಗಾಗಿದ್ದೆ ಎಂದು ತಿಳಿಸಿದ್ದಾರೆ.

ಕಷ್ಟಪಟ್ಟು ಕೆಲಸ ಮಾಡಿದರೆ ನಮ್ಮ ಕನಸು ನನಸಾಗುತ್ತದೆ ಎಂದು ನೀವು ಭಾವಿಸಿದರೆ ತಪ್ಪು ಎಂದು ಹೇಳಿರುವ ಕಂಗನಾ ರಣಾವತ್, ಕಷ್ಟಪಟ್ಟರೂ ಒಮ್ಮೊಮ್ಮೆ ಶಕ್ತಿಗೂ ಮೀರಿದ ಸವಾಲುಗಳು ಎದುರಾಗುತ್ತವೆ ಎಂದು ತಿಳಿಸಿದ್ದಾರೆ. ಎಮರ್ಜೆನ್ಸಿ ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್ ಮಹಿಮಾ ಚೌಧರಿ, ಸತೀಶ್ ಕೌಶಿಕ್, ಶ್ರೇಯಸ್ ತಲ್ಪಾಡೆ ಮೊದಲಾದವರು ಅಭಿನಯಿಸಿದ್ದಾರೆ.


Spread the love

By admin