ಬೆಂಗಳೂರು: ಗುಜರಾತ್ನ ಹಾಲು ಉತ್ಪಾದಕ ಸಂಸ್ಥೆ ‘ಅಮುಲ್’ನೊಂದಿಗೆ ಕರ್ನಾಟಕ ಹಾಲು ಮಹಾಮಂಡಳಿ ಯನ್ನು ವಿಲೀನ ಮಾಡುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಸ್ತಾವಕ್ಕೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ನಿಮ್ಮ ದೋಚುವ ಆಡಳಿತದ ಅವನತಿ 2023ಕ್ಕೆ ಕರ್ನಾಟಕದಿಂದಲೇ ಶುರುವಾಗಲಿದೆ ಎಂದು ಎಚ್ಚರಿಸಿದೆ.
ಕೇಂದ್ರ ಸರ್ಕಾರ ರಾಜ್ಯಗಳ ವಿರೋಧದ ನಡುವೆಯೂ, ರಾಜ್ಯ ಪಟ್ಟಿಯಲ್ಲಿದ್ದ ಸಹಕಾರಿ ವಿಷಯದ ಮೇಲೆ ತರಾತುರಿಯಲ್ಲಿ ಸಚಿವಾಲಯವನ್ನು ಸ್ಥಾಪಿಸಿದ್ದರ ಹಿಂದಿರುವ ಮರ್ಮ ಈಗ ತಿಳಿಯುತ್ತಿದೆ.
ಅಮಿತ್ ಶಾ ಅವರೇ ನೀವು ಕರ್ನಾಟಕಕ್ಕೆ ಬರುವುದರ ಉದ್ದೇಶವಾದರೂ ಏನು? ವೀಲಿನದ ಹೆಸರಲ್ಲಿ ಕರ್ನಾಟಕದ ಬ್ಯಾಂಕುಗಳನ್ನು ನುಂಗಿ ಹಾಕಿದ್ರಿ, ವಿಮಾನ ನಿಲ್ದಾಣಗಳನ್ನು ಬಂಡವಾಳಶಾಹಿಗಳ ವಶ ಮಾಡಿದ್ರಿ, ಈಗ ನಿಮ್ಮ ವಕ್ರದೃಷ್ಟಿ ನಮ್ಮ ಕೆಎಂಎಫ್ ಮೇಲೆ ಬಿದ್ದಂತಿದೆ ಎಂದು ಟೀಕಿಸಿದೆ. ಕೆಎಂಎಫ್ ಗೆ ನಿಮ್ಮ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊಡುಗೆಯಾದರೂ ಏನು? ಕರ್ನಾಟಕದ ಲಕ್ಷಾಂತರ ರೈತರು ಕಟ್ಟಿಬೆಳೆಸಿದ ಸಂಸ್ಥೆ ಇದು, ಇಂದು ರಾಜ್ಯದ ರೈತ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ಸಂಸ್ಥೆಯನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಗಲುಗನಸನ್ನು ಮೊದಲು ಬಿಟ್ಟುಬಿಡಿ ಎಂದು ಹೇಳಿದೆ.