ಕನಕಪುರ: ನರೇಗಾ ಕಾಮಗಾರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಜಿಲ್ಲಾ ಪಂಚಾಯ್ತಿಗೆ ದೂರು ನೀಡಿದ್ದ ಆರ್ಟಿಐ ಕಾರ್ಯಕರ್ತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲಸಿನಮರದೊಡ್ಡಿ ನಿವಾಸಿ ಮೂರ್ತಿ(27) ಕೊಲೆಯಾಗಿರುವ ಆರ್ಟಿಐ ಕಾರ್ಯಕರ್ತ. ಈ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ನರೇಗಾ ಕಾಮಗಾರಿಯಲ್ಲಿ ಅಕ್ರಮವಾಗಿದೆ ಎಂದು ಜಿಲ್ಲಾ ಪಂಚಾಯ್ತಿಗೆ ಮೂರ್ತಿ ದೂರು ನೀಡಿದ್ದರು. ದೂರಿನನ್ವಯ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಕಾಮಗಾರಿ ಪರಿಶೀಲನೆಗೆ ಬಂದಾಗ ಸ್ಥಳೀಯ ನಿವಾಸಿ ಚಂದನ್ ಇತರರೊಂದಿಗೆ ಸೇರಿಕೊಂಡು ಮೂರ್ತಿ ಮೇಲೆ ಹಲ್ಲೆ ನಡೆಸಿ ಗಲಾಟೆ ಮಾಡಿದ್ದರು.
ಆ ಸಂದರ್ಭದಲ್ಲಿ ಮೂರ್ತಿ ಹಾಗೂ ಚಂದನ್ನನ್ನು ಠಾಣೆಗೆ ಕರೆಸಿ ರಾಜಿ ಪಂಚಾಯ್ತಿ ಮಾಡಿ ಬುದ್ದಿವಾದ ಹೇಳಿ ಕಳುಹಿಸಿದ್ದರು. ಆದರೆ ಚಂದನ್ ಇಷ್ಟಕ್ಕೆ ಸುಮ್ಮನಾಗದೆ ಮೂರ್ತಿ ಮೇಲೆ ದ್ವೇಷ ಸಾಧಿಸುತ್ತಿದ್ದನು. ನಿನ್ನೆ ಸಂಜೆ 6.30ರ ಸುಮಾರಿನಲ್ಲಿ ಮೂರ್ತಿ ತಮ್ಮ ರಾಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಚಂದನ್ ಹಾಗೂ ತನ್ನ ಕುಟುಂಬದ ಇಬ್ಬರು ಸದಸ್ಯರು ಸೇರಿದಂತೆ ಗ್ರಾಮದ ಇನ್ನು ಹಲವರೊಂದಿಗೆ ಗುಂಪುಗೂಡಿಕೊಂಡು ರಾಗಿ ಹೊಲಕ್ಕೆ ನುಗ್ಗಿ ಹೊಲವನ್ನು ಧ್ವಂಸ ಮಾಡಿ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ.