ಬೆಂಗಳೂರು: ಕೊಲೆ, ದರೋಡೆ ಮತ್ತು ಅಪರಾಧಿಕ ಒಳಸಂಚಿನಂತಹ ಗಂಭೀರ ಸ್ವರೂಪದ ಅಪರಾಧ ಕೃತ್ಯಗಳ ವಿಚಾರಣೆ ವಿಳಂಬ ವನ್ನು ಪರಿಗಣಿಸಿ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲವೆಂದು ಆದೇಶಿಸಿರುವ ಬೆಂಗಳೂರಿನ ಹೈಕೋರ್ಟ್, ಜಾಮೀನು ಅರ್ಜಿಯ ತೀರ್ಮಾನದ ವೇಳೆ ಆರೋಪಿಯ ನಡತೆ, ಪಾತ್ರ, ಹಿನ್ನೆಲೆ ಮತ್ತು ಸ್ಥಾನದ ಬಗ್ಗೆ ನ್ಯಾಯಾಲಯ ಗಮನ ಹರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ದಕ್ಷಿಣ ಕನ್ನಡದಲ್ಲಿ ಟಿಪ್ಪರ್ ಲಾರಿಯಿಂದ ಡಿಕ್ಕಿ ಹೊಡೆದು, ಪಿಸ್ತೂಲ್ನಿಂದ ಗುಂಡು ಹಾರಿಸಿ ಮತ್ತು ತಲ್ವಾರ್ನಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಕೊಲೆಗೈದ ಪ್ರಕರಣದಲ್ಲಿ ಎರಡನೇ ಆರೋಪಿಯಾದ ಕೇರಳದ ಕಾಸರಗೋಡಿನ ನಿವಾಸಿ ಜಿಯಾ ಅಲಿಯಾಸ್ ಇಸುಬ್ ಶಿಯಾದ್ ಜಾಮೀನು ಕೋರಿ ಎರಡನೇ ಬಾರಿಗೆ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಪೀಠ ಈ ಆದೇಶ ಮಾಡಿದೆ.