ದಿ ಕಾಶ್ಮೀರ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಕೆಲ ಕಿಡಿಗೇಡಿಗಳು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರಂತೆ. ಇಂತಹ ಮಸೇಜ್ ಬರಲು ಕಾರಣ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾಗೆ ವಿವೇಕ್ ಅಗ್ನಿಹೋತ್ರಿ ಕೊಟ್ಟ ಪ್ರತಿಕ್ರಿಯೆ ಕಾರಣವೆಂದು ಹೇಳಲಾಗುತ್ತಿದೆ.
ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದರು ಎನ್ನುವ ಕಾರಣಕ್ಕಾಗಿ ದೊಡ್ಡ ಸುದ್ದಿ ಆಗಿತ್ತು. ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದವು. ಹಲವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು. ಅದೇ ರೀತಿಯಲ್ಲಿ ವಿವೇಕ್ ಅಗ್ನಿಹೋತ್ರಿ ಕೂಡ ಮಾತನಾಡಿದ್ದಾರೆ.
ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ಮತ್ತು ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ವಿವೇಕ್ ಅಗ್ನಿಹೋತ್ರಿ ಬಾಲಿವುಡ್ ಸಿನಿಮಾ ರಂಗವನ್ನು ಜರಿದಿದ್ದರು. ಅದರಲ್ಲೂ ಶಾರುಖ್ ಖಾನ್ ಅವರ ಈ ನಡೆಯನ್ನು ಖಂಡಿಸಿದ್ದರು. ಯಶಸ್ಸಿಗಾಗಿ ಇಂತಹ ಕೀಳುಮಟ್ಟಕ್ಕೆ ಇಳಿಯದಿರಲಿ ಎಂದು ಪರೋಕ್ಷವಾಗಿ ದೀಪಿಕಾ ಪಡುಕೋಣೆ ಅವರಿಗೂ ಚಾಟಿ ಬೀಸಿದ್ದರು. ವಿವೇಕ್ ಮಾತ್ರ ಹಲವರ ಕಂಗೆಣ್ಣಿಗೂ ಗುರಿಯಾಗಿತ್ತು.
ವಿವೇಕ್ ಅಗ್ನಿಹೋತ್ರಿ ಅವರು ಪಠಾಣ್ ಚಿತ್ರಕ್ಕೆ ಮತ್ತು ಶಾರುಖ್ ಖಾನ್ ವಿರುದ್ಧ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಶಾರುಖ್ ಖಾನ್ ಹೆಸರಿನಲ್ಲಿ ಕಿಡಿಗೇಡಿಗಳು ವಿವೇಕ್ ಅವರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದಾರಂತೆ. ಮಸೆಂಜರ್ ಸೇರಿದಂತೆ ಹಲವು ಕಡೆ ಶಾರುಖ್ ಖಾನ್ ಫೋಟೋ ಇರುವಂತಹ ಫೇಕ್ ಐಡಿಗಳಿಂದ ನಿಂದನೆಯ ಮತ್ತು ಕೆಟ್ಟ ಬೈಗುಳ ಇರುವಂತಹ ಮಸೇಜ್ ಗಳನ್ನು ಕಳುಹಿಸುತ್ತಿದ್ದಾರೆ. ಈ ವಿಷಯವನ್ನು ಸ್ವತಃ ವಿವೇಕ್ ಅವರೇ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.