ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಏನೂ ಸತ್ಯ ಹರಿಶ್ಚಂದ್ರ ಅಲ್ಲ, ಅವರು ತಾಜ್ ವೆಸ್ಟ್ ಎಂಡ್ನ ನಾಯಕ, ತಾಜ್ ವೆಸ್ಟ್ ಎಂಡ್ ಬಗ್ಗೆ ಇನ್ನೂ ಎಳೆ ಎಳೆಯಾಗಿ ಬಿಚ್ಚಿಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣರ ಸಮುದಾಯದ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಈ ರೀತಿ ಅವಹೇಳನ ಮಾಡಬಾರದು, ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಕುಮಾರಸ್ವಾಮಿ ಸ್ವಜಾತಿ ಕೂಪ ಮಂಡೂಕ ಸ್ವಜಾತಿ ಬಿಟ್ಟು ಹೊರಗೆ ಬರಲ್ಲ ಅವರು, ತಮ್ಮ ಕುಟುಂಬ, ಮನೆ ಬಿಟ್ಟು ಹೊರಗೆ ಬರಲಿ, ಅವರ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಅಂತ ಹೇಳಲಿ, ಅವರು ಸಿಎಂ ಆಗಿದ್ದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್ನಿಂದ ಆಡಳಿತ ಮಾಡುತ್ತಿದ್ದರು. ಇದನ್ನು ಜನ ಮರೆತಿಲ್ಲ, ಅಷ್ಟೊಂದು ಸ್ವಾರ್ಥಿ ರಾಜಕಾರಣಿ ಅವರು ಎಂದು ಹೆಚ್ಡಿಕೆ ವಿರುದ್ಧ ರವಿಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.