ಬೆಂಗಳೂರು: ಹೊಸ ವರ್ಷದ ಪಾರ್ಟಿ ವೇಳೆ ಕುಡಿದು ಕಟ್ಟಡದಿಂದ ಬಿದ್ದ ಯುವಕ ಸಾವನ್ನಪ್ಪಿದ ಘಟನೆ ಕಾಮಾಕ್ಷಿಪಾಳ್ಯದ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ. ಒಡಿಶಾ ಮೂಲದ ಬಾಪಿ ಮೃತ ಯುವಕ. ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ದಾಟುವ ಯತ್ನ ಮಾಡಿದ್ದ ಬಾಪಿ ಆಯತಪ್ಪಿ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಎರಡು ಕಟ್ಟಡಗಳ ನಡುವೆ ಹೋಗಿ ಬರಲು ಕಿಟಕಿ ಒಡೆದು ದಾರಿ ಮಾಡಿಕೊಂಡಿದ್ದರು.
ಆ ಕಿಟಕಿಯ ಮೂಲಕವೇ ಒಂದು ಕಟ್ಟಡದ ಟೆರೇಸ್ ಮೇಲೆ ಯುವಕರು ಹೋಗುತ್ತಿದ್ದರು. ಕೇಕ್ ತಂದು ಪಾರ್ಟಿ ಮಾಡುವುದಕ್ಕೆ ಸ್ನೇಹಿತರು ಸಿದ್ಧತೆ ಮಾಡಿಕೊಂಡಿದ್ದರು. ರಾತ್ರಿ ಕಿಟಕಿ ಮೂಲಕ ಕಟ್ಟಡದಿಂದ ಜಂಪ್ ಮಾಡಲು ಹೋಗಿದ್ದ ಬಾಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಬಾಪಿ ಕಾಟನ್ ಬಾಕ್ಸ್ ತಯಾರಿ ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಅಡಿ ಪ್ರಕರಣ ದಾಖಲಾಗಿದೆ.