ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇತ್ತೀಚೆಗೆ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಬಾಲಿವುಡ್ನಲ್ಲಿ ಅವರು ಕೆಲವರನ್ನು ಎದುರು ಹಾಕಿಕೊಂಡಿದ್ದಾರೆ. ಸಿದ್ಧಾಂತದ ಕಾರಣದಿಂದ ಒಂದು ವರ್ಗದ ನೆಟ್ಟಿಗರು ಅವರನ್ನು ವಿರೋಧಿಸುತ್ತಾರೆ. ಬಲಪಂಥೀಯ ವಿಚಾರಗಳನ್ನು ಅವರು ಹೆಚ್ಚು ಪ್ರತಿಪಾದಿಸುತ್ತಾರೆ ಎಂಬುದು ಹಲವರು ಅಭಿಪ್ರಾಯ.
ಇದರ ನಡುವೆ ಕಾಂಟ್ರವರ್ಸಿ ನಿರ್ದೇಶಕ ಕಮ್ ಸ್ವಯಂ ಘೋಷಿತ ವಿಮರ್ಶಕ ಕಮಲ್ ಆರ್ ಖಾನ್ ಅಗ್ನಿಹೋತ್ರಿಯ ಮೇಲೆ ಆರೋಪ ಮಾಡಿದ್ದಾರೆ.
ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರದ ವಿವಾದದಿಂದ ವಿವೇಕ್ ಅಗ್ನಿಹೋತ್ರಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಕಮಾಲ್ ಆರ್. ಖಾನ್ ಆರೋಪಿಸಿದ್ದಾರೆ. ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ವಿವೇಕ್ ಅಗ್ನಿಹೋತ್ರಿ ಜನಪ್ರಿಯತೆ ಹೆಚ್ಚಿತು. ಈಗ ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಶುರುವಾಗಿದೆ. ಆ ಸಿನಿಮಾದ ಕೆಲಸಗಳ ಜೊತೆಗೆ ಕೆಲವು ವಿವಾದಗಳ ಬಗ್ಗೆಯೂ ತಮ್ಮ ಅನಿಸಿಕೆ ಹಂಚಿಕೊಳ್ಳಲು ವಿವೇಕ್ ಅಗ್ನಿಹೋತ್ರಿ ಸಮಯ ಮಾಡಿಕೊಳ್ಳುತ್ತಿದ್ದಾರೆ.